ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಜಿಲ್ಲೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಆಗಸ್ಟ್ 9ರಂದು ಸಂಜೆ 6.30ಕ್ಕೆ ನಡೆಯಲಿದೆ. ವಕೀಲ, ವಾಗ್ಮಿ ಶರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಮೆರವಣಿಗೆಯು ಐತಿಹಾಸಿಕ ಸಾವಿರ ಕಂಬದ ಬಸದಿಯಿಂದ ಆರಂಭವಾಗಿ ಸಮಾಜ ಮಂದಿರದವರೆಗೆ ಸಾಗಲಿದೆ. ಭಜನಾ ತಂಡಗಳು, ಯುವ ಸಂಘಟನೆಗಳು, ಮಹಿಳೆಯರು, ಯುವಕರು ಹಾಗೂ ಹಿರಿಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ವಾದ್ಯಘೋಷಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಲಿವೆ. ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಭಟ್ಟಾರಕ ಸ್ವಾಮೀಜಿಯ ಆಶೀರ್ವಾದದೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಖ್ಯಾತ ನ್ಯಾಯವಾದಿ ಹಾಗೂ ಪ್ರಖರ ವಾಗ್ಮಿ ಪೃಥ್ವಿಶ್ ಧರ್ಮಸ್ಥಳ ದಿಕ್ಸೂಚಿ ಭಾಷಣ ಮಾಡಲಿದ್ದು, ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮಾಲೀಕ ಹಾಗೂ ಯುವ ನಾಯಕ ಅಜಯ್ ದೀಕ್ಷಿತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ. ಸಿ., ಸಹಸಂಯೋಜಕರಾದ ಶರತ್ ಮಿಜಾರ್ ಮತ್ತು ಸಂತೋಷ್ ಕುಮಾರ್ ಬನ್ನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.