ಮೂಡುಬಿದಿರೆ: ತುಳು ಕೂಟ ಬೆದ್ರದ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ತುಳು ಸಾಹಿತಿ ಜಯಂತಿ ಎಸ್. ಬಂಗೇರ ಹಾಗೂ ಕಾರ್ಯದರ್ಶಿಯಾಗಿ ಚೇತನಾ ಹೆಗ್ಡೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ವೇತಾ ಜೈನ್, ಜತೆ ಕಾರ್ಯದರ್ಶಿಯಾಗಿ ಸದಾನಂದ ನಾರಾವಿ ಹಾಗೂ ಕೋಶಾಧಿಕಾರಿಯಾಗಿ ಜಿನೇಂದ್ರ ಜೈನ್ ಆಯ್ಕೆಯಾಗಿದ್ದಾರೆ. ತುಳು ಕೂಟ ಬೆದ್ರದ ನಿರ್ಗಮನ ಅಧ್ಯಕ್ಷ ಎಚ್. ಧನಕೀರ್ತಿ ಬಲಿಪ ಅಧ್ಯಕ್ಷತೆಯಲ್ಲಿ ಕನ್ನಡಭವನದಲ್ಲಿ ಭಾನುವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜತೆ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಖರ್ಚು-ವೆಚ್ಚದ ವಿವರ ನೀಡಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಚಂದ್ರಹಾಸ ದೇವಾಡಿಗ ಹಾಗೂ ನಿರ್ಗಮನ ಉಪಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.