ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆ ಸಹಯೋಗದಲ್ಲಿ ಕಾನೂನು ಘಟಕ ಮೂಡುಬಿದಿರೆ ಹಾಗೂ ಟೀಮ್ ಬೆದ್ರ ವತಿಯಿಂದ ಹಮ್ಮಿಕೊಂಡ ‘ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ’ ಸ್ಟಿಕ್ಕರ್ ಅಭಿಯಾನಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಶುಕ್ರವಾರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ರಾಜೇಂದ್ರ ಬಿ., ಹಿಂದೆ ಡ್ರಗ್ಸ್ ಎಂದರೆ ಎಲ್ಲರಲ್ಲೂ ಭಯವಿತ್ತು. ಸಿನೆಮಾ, ಧಾರಾವಾಹಿಗಳಲ್ಲಿ ಮಾತ್ರ ಇವುಗಳ ಬಗ್ಗೆ ನೋಡುತ್ತಿದ್ದೆವು. ಆದರೆ ಈಗ ಕೇರಳ ಹಾಗೂ ಬೆಂಗಳೂರಿನಲ್ಲಿ ದೊರೆಯುವ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳು ಬ್ರೋಕರ್ಗಳ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಮಾದಕ ವಸ್ತುಗಳ ಮಾರಾಟದ ಕುರಿತು ಮಾಹಿತಿ ದೊರೆತರೆ ಪೊಲೀಸರ ಗಮನಕ್ಕೆ ತರುವಂತೆ ಮನವಿ ಮಾಡಿದ ಅವರು, ಸೈಬರ್ ಅಪರಾಧಗಳ ಬಗ್ಗೆಯೂ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಅಭಿಯಾನದ ಆಯೋಜಕ ಪದ್ಮಪ್ರಸಾದ್ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಭವಿಷ್ಯಕ್ಕೆ ಮಾರಕವಾಗಿರುವ ಡ್ರಗ್ಸ್ ಹಾಗೂ ಸೈಬರ್ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನತೆ ಸಕ್ರಿಯವಾಗಿ ಕೈಜೋಡಿಸಬೇಕು. ತಾಲೂಕಿನ ಎಲ್ಲ ಕಾಲೇಜುಗಳು ಹಾಗೂ ಗ್ರಾಮಗಳಲ್ಲಿ ಸ್ಟಿಕ್ಕರ್ ಅಭಿಯಾನ ನಡೆಸಲಾಗುವುದು ಎಂದರು.
ಎಸ್ಎನ್ಎಂ ಪಾಲಿಟೆಕ್ನಿಕ್ನ ನಿವೃತ್ತ ಪ್ರಾಂಶುಪಾಲ ಜೆ.ಜೆ. ಪಿಂಟೋ, ಪುರಸಭೆಯ ಮಾಜಿ ಸದಸ್ಯ ಪುರಂದರ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಪ್ರವೀಣ್ ಕುಮಾರ್, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಪ್ರಮುಖರಾದ ಅಲ್ವಿನ್ ಡಿಸೋಜ, ಸಿ.ಹೆಚ್. ಗಪೂರ್, ಅನೀಶ್ ಡಿಸೋಜ, ಕುಮಾರ್ ಪೂಜಾರಿ ಹಾಗೂ ನವೀನ್ ಟಿ.ಆರ್. ಉಪಸ್ಥಿತರಿದ್ದರು.
ರಾಜೇಶ್ ಕಡಲೆಕೆರೆ ಕಾರ್ಯಕ್ರಮ ನಿರೂಪಿಸಿದರು. ಕಾನೂನು ಘಟಕದ ಅಧ್ಯಕ್ಷ ಮರ್ವಿನ್ ಲೋಬೊ ವಂದಿಸಿದರು. ಶ್ರೀ ಮಹಾವೀರ ಕಾಲೇಜು ಹಾಗೂ ಶಿರ್ತಾಡಿ ಭುವನಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.