ಮೂಡುಬಿದಿರೆ: ಕರಿಮಣೇಲಿನ ಬ್ರೈಟ್ ಹೊರೈಝನ್ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.
ಡಾ. ಶಾಂತಿಪ್ರಸಾದ್ ಅವರು ಗಣ್ಯರೊಂದಿಗೆ ಧ್ವಜಾರೋಹಣ ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸದಾ ಗೌರವಿಸಬೇಕು ಎಂದು ಹೇಳಿದರು.
ಶಾಲೆಯ ಟ್ರಸ್ಟಿ ರಂಜಿತ್ ಪೂಜಾರಿ ತೋಡಾರ್ ಮಾತನಾಡಿ, ದೇಶದ ಮೂಲ ಶಕ್ತಿ ಯುವಕರು. ಮಕ್ಕಳು ಶಾಲೆಯಲ್ಲಿ ಶೈಕ್ಷಣಿಕವಾಗಿ ಬೆಳೆಯುವುದರ ಜತೆಗೆ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಇದೇ ಬ್ರೈಟ್ ಹೊರೈಝನ್ ಶಿಕ್ಷಣ ಸಂಸ್ಥೆಯ ಉದ್ದೇಶ ಎಂದು ಹೇಳಿದರು.
ಶಾಲೆಯ ಅಧ್ಯಕ್ಷ ಡಾ. ಶರತ್ ಗೋರೆ ಮಾತನಾಡಿ, ದೇಶಭಕ್ತಿ ಶಾಲೆಯಿಂದಲೇ ಆರಂಭವಾಗಬೇಕು. ಶಾಲೆಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಧರ್ಮಗಳ ಮಕ್ಕಳು ಒಟ್ಟಾಗಿ ಕಲಿಯುತ್ತಿದ್ದು, ಇದು ಒಂದು ರೀತಿಯಲ್ಲಿ ಮಿನಿ ಇಂಡಿಯಾದಂತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಲು ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ಮಕ್ಕಳು ಅರಿತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಶಾಂಭವಿ ಗೋರೆ ಸ್ವಾತಂತ್ರ್ಯದ ಮಹತ್ವ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಾಟೆ ಪ್ರದರ್ಶನ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ದೇಶಭಕ್ತಿಗೀತೆಗಳು ಮತ್ತು ಮಕ್ಕಳ ಭಾಷಣಗಳು ನಡೆದವು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಡಾ. ಶಶಿಧರ್, ಶೈಕ್ಷಣಿಕ ಮುಖ್ಯಸ್ಥೆ ಜೇಸಿಂಥ ಡಿ ಕುನ್ನಾ, ಕ್ಯಾಂಪಸ್ ಹೆಡ್ ಪ್ರಖ್ಯಾತ್ ಭಂಡಾರಿ, ಸಾರಿಕ ಪೂಜಾರಿ, ದಾಮೋದರ ಪೂಜಾರಿ, ನಾಗೇಶ್ ಬಂಗೇರ, ರವೀಂದ್ರ ಶೆಟ್ಟಿ ಸೇರಿದಂತೆ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.