ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ವರ್ಷಕ್ಕೆ 1000 ಗಿಡಗಳನ್ನು ನೆಟ್ಟು ಪೋಷಿಸುವ ಸಸ್ಯಶ್ಯಾಮಲಾ ಅಭಿಯಾನದಡಿ ಸಿಂಹ ಸಂಕ್ರಮಣದಂದು ಮಾರೂರು ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ 100ಕ್ಕೂ ಹೆಚ್ಚು ಭಕ್ತಾದಿಗಳಿಗೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ದಂಪತಿ ಹಾಗೂ ಅವರ ಪುತ್ರಿ ಮೌಲ್ಯಾ ಯುವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ವಿತರಿಸಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಮೂಲಕ ಸಸ್ಯಶ್ಯಾಮಲಾ ಅಭಿಯಾನವನ್ನು ಆಂದೋಲನದ ರೀತಿಯಲ್ಲಿ ಎಲ್ಲೆಡೆ ಸಸಿಗಳನ್ನು ವಿತರಿಸುವ ಮೂಲಕ ನಡೆಸಲಾಗುತ್ತಿದೆ. ಹಣ್ಣಿನ ಗಿಡಗಳನ್ನು ಪಡೆದ ಭಕ್ತಾದಿಗಳು ಅವುಗಳನ್ನು ನೆಟ್ಟು ಪೋಷಿಸಿ ಫಲ ಪಡೆಯುವ ಮೂಲಕ ಈ ಅಭಿಯಾನಕ್ಕೆ ಶಕ್ತಿ ತುಂಬಬೇಕು ಎಂದು ರಶ್ಮಿತಾ ಯುವರಾಜ್ ಜೈನ್ ಭಕ್ತಾದಿಗಳಲ್ಲಿ ವಿನಂತಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಭು ಎನ್. ಶೆಟ್ಟಿ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಾಜ ಆಸ್ರಣ್ಣರು ಭಕ್ತಾದಿಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಿದ ಯುವರಾಜ್ ಜೈನ್ ಮತ್ತು ರಶ್ಮಿತಾ ಯುವರಾಜ್ ಜೈನ್ ದಂಪತಿಯನ್ನು ಶಾಲು ಹೊದಿಸಿ, ದೇವರ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಶಿಕ್ಷಕ ಭಾಸ್ಕರ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.