ಮೂಡುಬಿದಿರೆ: ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ, ಎಂಟು ಗಂಟೆಯ ಕೆಲಸ ಕಾರ್ಮಿಕರ ಹಕ್ಕು ಎಂಬ ಘೋಷಣೆಯೊಂದಿಗೆ ಮೂಡುಬಿದಿರೆಯಲ್ಲಿ ಮೇ 1ರಂದು ಕಾರ್ಮಿಕ ಅಂತರರಾಷ್ಟ್ರೀಯ ದಿನವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9:30ಕ್ಕೆ ಜಿ.ವಿ.ಪೈ ಆಸ್ಪತ್ರೆಯ ಮುಂಭಾಗದಲ್ಲಿರುವ ಸಿಐಟಿಯು ಕಚೇರಿ ಬಳಿಯಿಂದ ಕಾರ್ಮಿಕ ವರ್ಗದ ಮೆರವಣಿಗೆ ಆರಂಭಗೊಳ್ಳಲಿದೆ. ಬಳಿಕ 10 ಗಂಟೆಗೆ ಮೂಡುಬಿದಿರೆ ತಹಶೀಲ್ದಾರ್ ಕಚೇರಿ ಬಳಿ ಸಾರ್ವಜನಿಕ ಸಭೆ ಹಾಗೂ ಕಾರ್ಮಿಕರು ಮತ್ತು ಅವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಮಿಕ ವಿರೋಧಿ ಸಂಹಿತೆಯನ್ನು ವಿರೋಧಿಸಿ ಮತ್ತು ಕನಿಷ್ಠ ಕೂಲಿಯನ್ನು ಪರಿಷ್ಕರಿಸಲು ಒತ್ತಾಯಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೀಡಿ, ಕಟ್ಟಡ, ಬಿಸಿಯೂಟ ಸೇರಿದಂತೆ ಇನ್ನಿತರ ಕಾರ್ಮಿಕರು, ಪಿಂಚಣಿದಾರರು, ಯುವಜನರು, ಮಹಿಳೆಯರು, ದಲಿತ ಹಾಗೂ ಆದಿವಾಸಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮೇ ದಿನ ಆಚರಣಾ ಸಮಿತಿಯ ಸಂಚಾಲಕರಾದ ಶಂಕರ ವಾಲ್ಪಾಡಿ, ರಾಧಾ ಪುತ್ತಿಗೆ ವಿನಂತಿಸಿದ್ದಾರೆ.