ಮುಂಬೈ: ನಾಪತ್ತೆಯಾಗಿದ್ದ ಮೂಡುಬಿದಿರೆಯ ಜಗದೀಶ್ ಅವರು ಮುಂಬೈನ ನವಿ ಮುಂಬೈ ಪನ್ವೆಲ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಜಗದೀಶ್ ಅವರ ಕುಟುಂಬದವರು, ಮೂಡುಬಿದಿರೆ ಪೊಲೀಸ್ ಠಾಣೆ ಹಾಗೂ ಸ್ಥಳೀಯ ಕುಲಾಲ ಸಮಾಜದ ಸದಸ್ಯರು ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಮತ್ತು ಪತ್ರಕರ್ತ ದಿನೇಶ್ ಕುಲಾಲ್ ಅವರನ್ನು ಸಂಪರ್ಕಿಸಿದ್ದರು. ಜಗದೀಶ್ ಅವರು ಪನ್ವೆಲ್‌ನ ಬಾಲಕೃಷ್ಣ ಶೆಟ್ಟಿ ಅವರ ಹೋಟೆಲ್‌ನಲ್ಲಿ ಸುರಕ್ಷಿತವಾಗಿ ತಂಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅವರ ಸಂಬಂಧಿಕರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಏಪ್ರಿಲ್ 25ರಂದು ಕೆಲಸಕ್ಕೆ ತೆರಳಿದ್ದ ಜಗದೀಶ್ ಅವರು ಸಂಜೆ 5:40ಕ್ಕೆ ಫ್ಯಾಕ್ಟರಿಯಿಂದ ಹೊರಟಿದ್ದರು. ಬಳಿಕ ಬೆಳುವಾಯಿಯಿಂದ ಮೂಡುಬಿದಿರೆ ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದರು. ಆದರೆ ನಂತರ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದರು.