ವೇಣೂರು: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಆರಂಬೋಡಿ ವ್ಯಾಪ್ತಿಯ ಪಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಮರಳುಗಾರಿಕೆ ವಿರುದ್ಧ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಿರುವ ಪ್ರದೇಶವನ್ನು ಮೀರಿ, ನದಿ ತಟದ ಬೇರೆ ಭಾಗಗಳಲ್ಲಿ ಜೆಸಿಪಿ ಬಳಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದನ್ನು ರೈತರು ತೀವ್ರವಾಗಿ ಖಂಡಿಸಿದರು. ರೈತರ ಈ ದಿಟ್ಟ ಹೋರಾಟಕ್ಕೆ ಮಣಿದ ಗಣಿ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು. ತಹಶೀಲ್ದಾರ್ ಹಾಗೂ ಭೂಮಾಪಕರ ಸಮಕ್ಷಮದಲ್ಲಿ ಅಳತೆ ಕಾರ್ಯ ಪೂರ್ಣಗೊಳ್ಳುವವರೆಗೆ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಗಣಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರವು ಭಾರತೀಯ ಕಿಸಾನ್ ಸಂಘ ಮತ್ತು ಸ್ಥಳೀಯ ರೈತರ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಂಘಟನೆಯ ಪ್ರಮುಖರಾದ ಸದಾಶಿವ, ಪ್ರವೀಣ್, ಮಂಗಳೂರಿನ ಅಶ್ವಿನಿ ಪೂಜಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.