ಮೂಡುಬಿದಿರೆ: ಕಡಂದಲೆ ಗ್ರಾಮದ ಕಲ್ಲೋಳಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು ಸಾವಿರಾರು ಮತದಾರರಿದ್ದರೂ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಇದರಿಂದಾಗಿ ಯಾವುದೇ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಆಟೋ ಚಾಲಕರು ಕೂಡ ಈ ಭಾಗಕ್ಕೆ ಬರಲು ನಿರಾಕರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಳೆದ 2022ರ ಜುಲೈ 9ರಂದು ನೆರೆ ಹಾನಿಯಾದ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಈ ಭಾಗಕ್ಕೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿಯ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷಗಳು ಕಳೆದರೂ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಹತ್ತಿರ ಬರುತ್ತಿರುವುದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ನೆರೆ ಹಾವಳಿ ಮರುಕಳಿಸದಂತೆ ರಸ್ತೆ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರುಣ್ ಶೆಟ್ಟಿ, ಅತಿತ್ ಶೆಟ್ಟಿ, ಸುನಿಲ್ ಪೂಜಾರಿ, ಸಂತೋಷ ಶೆಟ್ಟಿಗಾರ್, ನಾಗೇಶ್ ಶೆಟ್ಟಿಗಾರ್, ಅಶ್ವಥ್ ಪೂಜಾರಿ, ಸಂದೀಪ್ ಪೂಜಾರಿ, ಭರತ್ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಚಾರಕ್ಕೆ ಅಯೋಗ್ಯವಾದ ಕಡಂದಲೆ ಕಲ್ಲೋಳಿ ರಸ್ತೆ: ಶಾಸಕರ ಭರವಸೆ ಈಡೇರಿಕೆಗೆ ಒತ್ತಾಯ
ಸಂಚಾರಕ್ಕೆ ಅಯೋಗ್ಯವಾದ ಕಡಂದಲೆ ಕಲ್ಲೋಳಿ ರಸ್ತೆ: ಶಾಸಕರ ಭರವಸೆ ಈಡೇರಿಕೆಗೆ ಒತ್ತಾಯ