ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169ರ ಬನ್ನಡ್ಕದಲ್ಲಿ ಸತತವಾಗಿ ಸಂಭವಿಸುತ್ತಿರುವ ಅಪಘಾತಗಳ ಕುರಿತು ಚರ್ಚಿಸಲು ಪಡುಮಾರ್ನಾಡು ಗ್ರಾಮಸ್ಥರು ಸೋಮವಾರ ಸಂಜೆ ಸಭೆ ನಡೆಸಿದರು. 2023ರಿಂದ 2026ರ ಅವಧಿಯಲ್ಲಿ ಇಲ್ಲಿ 15ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ 8 ಮಂದಿ ಮೃತಪಟ್ಟಿದ್ದು, ಕಳೆದ ಮೂರೇ ದಿನಗಳಲ್ಲಿ 4 ಅಪಘಾತಗಳು ನಡೆದಿರುವುದು ಆತಂಕ ಮೂಡಿಸಿದೆ. ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕೆಂದು ಸೂರಜ್ ಮಾರ್ನಾಡ್ ಸಭೆಯಲ್ಲಿ ತಿಳಿಸಿದರು. ಸಮಸ್ಯೆಯ ಗಂಭೀರತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತರಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 9:30ಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ತಹಸಿಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಡಿಬಿಎಲ್ ಕಾಂಟ್ರಾಕ್ಟರ್ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಬನ್ನಡ್ಕದಿಂದ ಅಲಂಗಾರು ಕಡೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಹಾಗೂ ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಲಿದ್ದಾರೆ. ಸಭೆಯಲ್ಲಿ ನಿತಿನ್ ಕೋಟ್ಯಾನ್, ಸಂತೋಷ್, ಅಕ್ಷಯ್, ಸುಧಾಕರ್ ಆಚಾರ್ಯ, ಸಂತೋಷ್ ಜೈನ್, ಸುರೇಶ್ ಅಂಚನ್, ಪ್ರೀತಮ್ ಸೇರಿದಂತೆ ಊರಿನ ನಾಗರಿಕರು ಭಾಗವಹಿಸಿದ್ದರು.
ಸತತ ಅಪಘಾತಕ್ಕೆ ಬೆಚ್ಚಿದ ಬನ್ನಡ್ಕ; ಸರ್ವಿಸ್ ರಸ್ತೆಗಾಗಿ ಮನವಿ
ಸತತ ಅಪಘಾತಕ್ಕೆ ಬೆಚ್ಚಿದ ಬನ್ನಡ್ಕ; ಸರ್ವಿಸ್ ರಸ್ತೆಗಾಗಿ ಮನವಿ