ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮ 2026ನ್ನು ಕಳೆದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಈ ನಿಯಮದಡಿ ಪುರಸಭೆ ವ್ಯಾಪ್ತಿಯ ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸುವುದನ್ನು ಪುರಸಭೆಯು ಕಡ್ಡಾಯಗೊಳಿಸಿದೆ. ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬೇಕಿದೆ. ಪೈಂಟ್ ಡ್ರಮ್‌ಗಳು, ಕೀಟನಾಶಕ ಕ್ಯಾನ್ ಅಥವಾ ಬಾಟಲಿಗಳು, ಸಿ.ಎಫ್.ಸಿ ಬಲ್ಬ್‌ಗಳು, ಅವಧಿ ಮೀರಿದ ಔಷಧಿಗಳು, ನಿರುಪಯುಕ್ತ ಸೂಜಿಗಳು, ಸಿರಿಂಜುಗಳು ಮತ್ತು ಕಲುಷಿತ ಮಾಪಕಗಳನ್ನು ವಿಶೇಷ ಕಾಳಜಿ ತ್ಯಾಜ್ಯದ ಅಡಿಯಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಸಾರ್ವಜನಿಕರು ಈ ರೀತಿಯಾಗಿ ತ್ಯಾಜ್ಯವನ್ನು ವಿಭಾಗವಾರು ವಿಂಗಡಿಸಿ ಪುರಸಭೆಯ ಕಸದ ವಾಹನಕ್ಕೆ ಹಸ್ತಾಂತರಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಇಂದು.ಎಂ ಪ್ರಕಟಣೆಯಲ್ಲಿ ತಿಳಿಸಿದರು.