ಮೂಡುಬಿದಿರೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆ–2026ರ ಪೂರ್ವಭಾವಿಯಾಗಿ, ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ “ಯೋಗ ಮಹೋತ್ಸವ–2026” ಕಾರ್ಯಕ್ರಮವನ್ನು ಮಿಜಾರಿನ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾ ಫಾರ್ಮಸಿಯ ವ್ಯವಸ್ಥಾಪಕ ನಿರ್ದೇಶಕಿ ಗ್ರೀಷ್ಮಾ ವಿವೇಕ್ ಆಳ್ವ, ಯೋಗ ಮಹೋತ್ಸವದಂತಹ ಕಾರ್ಯಕ್ರಮಗಳು ಯೋಗದ ಮಹತ್ವ ಮತ್ತು ಅದರ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಪರಿಣಾಮಕಾರಿ ಮಾಧ್ಯಮವಾಗಿದೆ. ಇಂದಿನ ವೇಗದ ಬದುಕಿನಲ್ಲಿ ಯೋಗದ ಅಭ್ಯಾಸ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಉಪನ್ಯಾಸಕ ಆಕಾಶ್ ಯೋಗದ ಇತಿಹಾಸ, ಅದರ ವಿಕಾಸ, ಆಧುನಿಕ ಜೀವನದಲ್ಲಿ ಯೋಗದ ಅಳವಡಿಕೆ ಹಾಗೂ ವಿವಿಧ ಯೋಗ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಸಂಯೋಜಿತ ಯೋಗ ಅಭ್ಯಾಸ ಕ್ರಮದನ್ವಯ (ಕಾಮನ್ ಯೋಗ ಪ್ರೋಟೋಕಾಲ್) ಯೋಗ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಸೇರಿದಂತೆ 500ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಯೋಗ ಮಹೋತ್ಸವದ ಭಾಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಪೈಕಿ ಭಗವದ್ಗೀತೆ ಶ್ಲೋಕ ಪಠಣದಲ್ಲಿ ಶ್ರೀನಿಧಿ ಭಟ್ ಪ್ರಥಮ ಹಾಗೂ ದೀಪಿಕಾ ಹೆಗ್ಡೆ ದ್ವಿತೀಯ ಬಹುಮಾನ ಪಡೆದರು. ಶೀರ್ಷಾಸನ ಬ್ಯಾಲೆನ್ಸ್ ಚಾಲೆಂಜ್‌ನಲ್ಲಿ ಪ್ರಜ್ವಲ್ ಮತ್ತು ಮುಕ್ತಾ ಪ್ರಥಮ ಸ್ಥಾನ ಹಂಚಿಕೊಂಡರೆ, ಸಾಗರ್ ಹಾಗೂ ಭೂಮಿಕಾ ಟಿ ದ್ವಿತೀಯ ಸ್ಥಾನ ಗಳಿಸಿದರು. ಫ್ಯೂಷನ್ ಯೋಗ ಡ್ಯಾನ್ಸ್ ಸ್ಪರ್ಧೆಯಲ್ಲಿ ಮುಕ್ತಾ ಮತ್ತು ತಂಡ ಪ್ರಥಮ, ಪ್ರಣವ್ ಮತ್ತು ತಂಡ ದ್ವಿತೀಯ ಬಹುಮಾನ ಪಡೆದುಕೊಂಡರು.

ಪ್ರಾಂಶುಪಾಲೆ ವನಿತಾ ಶೆಟ್ಟಿ, ಉಪಪ್ರಾಂಶುಪಾಲೆ ವಿದ್ಯಾರಾಣಿ ಹಾಗೂ ಪ್ರಾಧ್ಯಾಪಕಿ ಅರ್ಚನಾ ಉಪಸ್ಥಿತರಿದ್ದರು. ಅನಂತ ಕೃಷ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.