ಮೂಡುಬಿದಿರೆ: ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರು ಯಾವುದೇ ಕಾರ್ಯನಿರ್ವಹಿಸದೆ ಅಕ್ರಮ ಅರ್ಜಿದಾರರನ್ನು ಹಾಗೂ ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಿತ್ತಬೈಲು ವಾಸುದೇವ ನಾಯಕ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ರಾಜ್ಯ ಸರ್ಕಾರವು 2023 ರಲ್ಲಿ ಮೂಡುಬಿದಿರೆ ಅಕ್ರಮ ಸಕ್ರಮ ಸಮಿತಿಯನ್ನು ನೇಮಿಸಿದ್ದು, ಪ್ರಸ್ತುತ ಸರ್ಕಾರದ ನಿಯಮದಂತೆ ಮಾನ್ಯ ಶಾಸಕರು ಇದರ ಅಧ್ಯಕ್ಷರಾಗಿದ್ದಾರೆ. ಸಮಿತಿಯು ಯಾವುದೇ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಈ ಬಗ್ಗೆ ರಾಜಕಾರಣ ಮಾಡಲಾಗುತ್ತಿದೆ ಎಂದು ಈ ಹಿಂದೆಯೂ ಪತ್ರಿಕಾ ಹೇಳಿಕೆ ನೀಡಲಾಗಿತ್ತು. ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆ ನಡೆಸುತ್ತಿರುವ ಕೃಷಿಕರಿಗೆ ಆದಷ್ಟು ಬೇಗ ಅಕ್ರಮ ಸಕ್ರಮ ಸಮಿತಿಯ ಸಭೆ ಕರೆದು ಮೂಡುಬಿದಿರೆ ತಾಲೂಕಿನ ಸಂಬಂಧಪಟ್ಟ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೂ ಶಾಸಕರು ಯಾವುದೇ ಮುತುವರ್ಜಿ ತೋರಿಸಿಲ್ಲ. ಮನವಿ ಮಾಡಿ ಒಂದು ವರ್ಷ ಕಳೆದರೂ ಯಾವುದೇ ಸಭೆ ನಡೆಸದೆ ಮೂಡುಬಿದಿರೆ ತಾಲೂಕಿನ ರೈತರಿಗೆ ಅನ್ಯಾಯವೆಸಗಲಾಗಿದೆ ಎಂದು ಅವರು ದೂರಿದ್ದಾರೆ. ಶಾಸಕರಿಗೆ ಈ ಹಿಂದಿನ ಅವಧಿಯಲ್ಲಿಯೂ ರೈತರಿಗೆ ಸಾಗುವಳಿ ಚೀಟಿ ನೀಡುವ ಅವಕಾಶವಿದ್ದರೂ ಮೂಡುಬಿದಿರೆ ತಾಲೂಕಿನ ಸಂಬಂಧಪಟ್ಟ 57 ಮತ್ತು 53 ರ ಅರ್ಜಿಗಳನ್ನು ಬಾಕಿ ಇರಿಸಿದ್ದು ಯಾವುದೇ ಆಸಕ್ತಿ ತೋರಿಸಿಲ್ಲ. ಶಾಸಕರು ಮೊದಲು ಅಕ್ರಮ ಸಕ್ರಮ ಸಮಿತಿಯನ್ನು ನಡೆಸಿ ನ್ಯಾಯುತವಾಗಿ ರೈತರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸರಿಯಾಗಿ ಸ್ಪಂದಿಸದಿದ್ದರೆ ರೈತರನ್ನು ಒಟ್ಟುಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅಕ್ರಮ ಸಮಿತಿ ಸದಸ್ಯರಾದ ಮೆರಿಟಾ ಮೆನೇಜಸ್, ಕರುಣಾಕರ ತೋಡಾರು ಸುದ್ದಿಗೋಷ್ಠಿಯಲ್ಲಿದ್ದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಿಂದ ರೈತರ ನಿರ್ಲಕ್ಷ್ಯ: ಮಿತ್ತಬೈಲು ವಾಸುದೇವ ನಾಯಕ್ ಆರೋಪ
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಿಂದ ರೈತರ ನಿರ್ಲಕ್ಷ್ಯ: ಮಿತ್ತಬೈಲು ವಾಸುದೇವ ನಾಯಕ್ ಆರೋಪ