ಮೂಡುಬಿದಿರೆ: ಪುತ್ತಿಗೆಯ ಸೋಮನಾಥೇಶ್ವರ ದೇವಸ್ಥಾನದ ಸಮೀಪದ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಗುರುವಾರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ನೆರವೇರಿತು. ಬೆಳಗ್ಗಿನಿಂದಲೇ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಣಹೋಮ, ನವಕಲಶ, ಪ್ರಧಾನ ಹೋಮ, ಕಲಶಾಭಿಷೇಕ ಹಾಗೂ ಅಲಂಕಾರ ಪೂಜೆಗಳು ವೈದಿಕ ವಿಧಿವಿಧಾನಗಳೊಂದಿಗೆ ನಡೆದವು. ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಉತ್ಸವದ ವಿಶೇಷ ಆಕರ್ಷಣೆಯಾಗಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿರಂತರ ಭಜನಾ ಸಂಕೀರ್ತನೆ ನಡೆಯಿತು. ವಿವಿಧ ಭಜನಾ ಮಂಡಳಿಗಳು ಭಜನೆ ಪ್ರಸ್ತುತಪಡಿಸಿದರು. ರಾಘವೇಂದ್ರ ಸ್ವಾಮಿಯ ಪ್ರತಿಮೆಗೆ ಬಂಗಾರದ ಕವಚವನ್ನು ಕಿಶೋರ್ ಕೋಟ್ಯಾನ್ ಕುಟುಂಬಸ್ಥರು ಸಮರ್ಪಸಿದರು. ಸಂಜೆ ನಿತ್ಯಪೂಜೆ, ರಂಗಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಶಾಸಕ ಉಮಾನಾಥ್ ಕೋಟ್ಯಾನ್ , ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಾಹುಬಲಿ ಪ್ರಸಾದ್ , ಚಂದ್ರಹಾಸ ಸನಿಲ್, ಪ್ರಮುಖರಾದ ಭಾರತಿ ಕಿಶೋರ್ ಕೋಟ್ಯಾನ್ , ರಾಮದಾಸ್ ಕೋಟ್ಯಾನ್, ಸತೀಶ್ ಬಂಗೇರ, ರಾಜೇಂದ್ರ ಸಾಲ್ಯಾನ್, ಶಶಿಧರ್ ಎಸ್ ಅಂಚನ್ ಎಂಕ್ರಿಪಲ್ಲ ಪ್ರಮುಖರಾಗಿ ಉಪಸ್ಥಿತರಿದ್ದರು.