ಮೂಡುಬಿದಿರೆ: ಇಲ್ಲಿನ ಕೆಸರಗದ್ದೆಯ ಶ್ರೀ ರಾಮಮಂದಿರದಲ್ಲಿ ಮೇ 31 ರಂದು ಅಧಿಕ ಮಾಸದ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಪೂರ್ವಾಹ್ನದಿಂದಲೇ ಆರಂಭಗೊಂಡ ಧಾರ್ಮಿಕ ವಿಧಿವಿಧಾನಗಳಲ್ಲಿ ವ್ಯಾಸೋಪಾಸನೆ, ಭಜನೆ ಸಹಿತ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ರಾಮಚಂದ್ರ ದೇವರಿಗೆ ವಿಶೇಷ ಹೂವಿನ ಪೂಜೆಯನ್ನು ನೆರವೇರಿಸಲಾಯಿತು. ವೈದಿಕ ವಿಧಿವಿಧಾನಗಳನ್ನು ವೇದಮೂರ್ತಿ ಪದ್ಮನಾಭ ಭಟ್ ಮತ್ತು ಸುರೇಂದ್ರ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆಸಿಕೊಡಲಾಯಿತು. ಇದೇ ಸಂದರ್ಭದಲ್ಲಿ ವೇದಮೂರ್ತಿ ಹರಿಪ್ರಸಾದ ಶರ್ಮ ಅವರು ಅಧಿಕ ಮಾಸದ ವಿಶೇಷತೆ ಹಾಗೂ ಅದರ ಧಾರ್ಮಿಕ ಮಹತ್ವದ ಕುರಿತು ಸಾರ್ವಜನಿಕರಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಕೆ.ವಿಶ್ವನಾಥ ಮಾಧವ ಪ್ರಭು, ಸಮಾಜ ಬಾಂಧವರು ಹಾಗೂ ಭಜಕರು ಪಾಲ್ಗೊಂಡಿದ್ದರು. ವರದಿ: ದೇವದಾಸ ಕಿಣಿ