ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೃಷ್ಣರಾಜ ಹೆಗ್ಡೆ ನೇತೃತ್ವದ ನಿರ್ದೇಶಕರ ತಂಡಕ್ಕೆ ಸ್ಪಷ್ಟ ಬಹುಮತ ದೊರೆತಿದೆ. ಜುಲೈ 10, 2025ರಂದು ನಡೆದಿದ್ದ ಸೊಸೈಟಿ ಚುನಾವಣೆಯ ನ್ಯಾಯಾಲಯದ್ ಆದೇಶದಂತೆ ಅಧಿಕೃತ ಫಲಿತಾಂಶವನ್ನು ಕಲ್ಲಬೆಟ್ಟು ಸೊಸೈಟಿಯ ಮುಖ್ಯ ಕಚೇರಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು. ಚುನಾವಣೆಯಲ್ಲಿ ಕೃಷ್ಣರಾಜ ಹೆಗ್ಡೆ ನೇತೃತ್ವದ ತಂಡ, ಬಹುತೇಕ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಸೊಸೈಟಿಯ ಮೇಲಿನ ತನ್ನ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಗೆಲುವು ಸಾಧಿಸಿದ ತಂಡದ ಪ್ರಮುಖ ನಾಯಕ ಕೃಷ್ಣರಾಜ ಹೆಗ್ಡೆ ಅವರನ್ನು ಕಲ್ಲಬೆಟ್ಟು ಸೊಸೈಟಿಯ ಆಡಳಿತ ಚುಕ್ಕಾಣಿ ಹಿಡಿಯಲು ಸದಸ್ಯರು ಮತ್ತೊಮ್ಮೆ ಬೆಂಬಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕೃಷ್ಣರಾಜ ಹೆಗ್ಡೆ ಅವರೊಂದಿಗೆ ಸಿಪ್ರಿಯನ್ ಪಿಂಟೋ, ನಳಿನಿ ಆರ್ ಹೆಗ್ಡೆ, ರಮೇಶ್ಚಂದ್ರ ಪಿ, ಸತೀಶ್ ಶೆಟ್ಟಿ, ಯಾದವ ಹಾಗೂ ಜಯಂತಿ ಆಚಾರ್ ಭರ್ಜರಿ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲದೆ ಸಂಘದ ಇತರ ಪ್ರಮುಖ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ ಪದ್ಮಯ ಬಿ ಸುವರ್ಣ, ಸುರೇಶ್ ಕೋಟ್ಯಾನ್, ಸತೀಶ್ ಕೋಟಿಯನ್ ಮತ್ತು ಆಲ್ವಿನ್ ಮಿನೇಜಸ್ ಅವರು ಕೂಡ ಪ್ರಚಂಡ ಬಹುಮತದೊಂದಿಗೆ ಗೆಲುವಿನ ನಗೆ ಬೀರಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಇಂದು ಸೊಸೈಟಿಯಲ್ಲಿ ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ವಿಜೇತ ಅಭ್ಯರ್ಥಿಗಳ ಘೋಷಣೆ ಮಾಡಿದರು. ಹೊಸ ಆಡಳಿತ ಮಂಡಳಿಯ ಆಯ್ಕೆಗೆ ಸೊಸೈಟಿಯ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಅನುಭವಿ ನಾಯಕತ್ವಕ್ಕೆ ಒಲಿದ ಜಯ: ಕರಿಂಜೆಗುತ್ತು ಕೃಷ್ಣರಾಜ್ ಹೆಗ್ಡೆ ಹಿರಿಯ ಸಹಕಾರಿ ನಾಯಕರಾಗಿದ್ದು, ಕಳೆದ 35 ವರ್ಷಗಳಿಂದ ಕಲ್ಲಬೆಟ್ಟು ಸೊಸೈಟಿಯ ನಿರ್ದೇಶಕರಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸುದೀರ್ಘ ಕಾಲದವರೆಗೆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಪಾರ ಅನುಭವ ಹೊಂದಿರುವ ಇವರ ನಾಯಕತ್ವಕ್ಕೆ ಮತದಾರರು ಮತ್ತೊಮ್ಮೆ ಮನ್ನಣೆ ನೀಡಿದ್ದಾರೆ.