ಮೂಡುಬಿದಿರೆ: ಪಾಡ್ಯಾರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡುಬಿದಿರೆ ವಲಯ ಸಾಮಾಜಿಕ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತು ಸಹಾಯಕ ಅರಣ್ಯ ಅಧಿಕಾರಿ ಆನಂದ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಇಕೋ ಕ್ಲಬ್ ಮತ್ತು ಶಾಲಾ ವನದ ಪರಿಸರದಲ್ಲಿ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಗಮನ ಸೆಳೆದರು. ಶಾಲಾ ಆವರಣದಲ್ಲಿ ಹುಣಸೆ, ಹೊಂಗೆ, ಕಹಿಬೇವು, ಬಿದಿರು, ರಾಮಪತ್ರಿ, ಜಾರಿಗೆ ಹಾಗೂ ಹೆಬ್ಬಲಸು ಸೇರಿದಂತೆ ವಿವಿಧ ತಳಿಯ ಸುಮಾರು 16 ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ನೆಟ್ಟ ಗಿಡಗಳನ್ನು ಜವಾಬ್ದಾರಿಯಿಂದ ಪೋಷಿಸಿ ಬೆಳೆಸುವ ಪ್ರತಿಜ್ಞೆ ಕೈಗೊಂಡರು. ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮಕ್ಕಳಿಗೆ ಪರಿಸರ ದಿನಾಚರಣೆಯ ಮಹತ್ವ ಹಾಗೂ ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಅಗತ್ಯದ ಕುರಿತು ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಪ್ರಸನ್ನ ವಿ. ಶೆಣೈ , ಸಹ ಶಿಕ್ಷಕ ರಾಬರ್ಟ್ ಡಿಸೋಜಾ, ಸ್ವಯಂಸೇವಕ ಶಿಕ್ಷಕಿ ಪ್ರತಿಭಾ, ಪ್ರಜ್ವಲ್ ಮತ್ತು ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಉಪಸ್ಥಿತರಿದ್ದರು.