ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಎಂ. ದಿನೇಶ್ ನಾಯಕ್ ಅವರು ನಾಗ ಸಂಪಿಗೆ, ಗುಲಗುಂಜಿ, ಕಾಗೆಮಾರಿ ಬಳ್ಳಿ, ಹೊಳೆ ದಾಸವಾಳ, ಅಗ್ನಿಶಿಖೆ, ಅಮೃತಬಳ್ಳಿ, ಸೀತಾ ಅಶೋಕ ಸೇರಿದಂತೆ ಅಪರೂಪದ ಔಷಧೀಯ ಸಸ್ಯಗಳ ಮಹತ್ವ ಹಾಗೂ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರವನ್ನು ವಿವರಿಸಿದರು. ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆಯಿಂದ ಸಸ್ಯ ವೈವಿಧ್ಯತೆಗೆ ಎದುರಾಗುತ್ತಿರುವ ಅಪಾಯಗಳ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆವಹಿಸಿ ಮಾತನಾಡಿ, ಪಶ್ಚಿಮ ಘಟ್ಟವು ವೈವಿಧ್ಯಮಯ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಸಸ್ಯ ಪ್ರಭೇದಗಳ ನೆಲೆಯಾಗಿದ್ದು, ಸ್ಥಳೀಯ ಪರಿಸರದಲ್ಲಿರುವ ಔಷಧೀಯ ಸಸ್ಯಗಳ ಕುರಿತು ಅರಿವು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳು ಸ್ಥಳೀಯ ಔಷಧೀಯ ಸಸ್ಯಗಳ ಪ್ರದರ್ಶನ ಏರ್ಪಡಿಸಿ ಅವುಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿ. ಬಿ. ಎಸ್.ಇ ಮುಖ್ಯ ಶಿಕ್ಷಕ ಶ್ರೀಪ್ರಸಾದ್ ಉಪಸ್ಥಿತರಿದ್ದರು.

ಉಪ ಮುಖ್ಯ ಶಿಕ್ಷಕ ಜಯಶೀಲ ಅತಿಥಿ ಪರಿಚಯ ಮಾಡಿದರು. ಶಿಕ್ಷಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ನೆಲ್ಯಾಡಿ ಹಾಗೂ ದಿವ್ಯಾ ತಾಂತ್ರಿಕವಾಗಿ ಸಹಕರಿಸಿದರು.