ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ರಾಮಕ್ಷತ್ರಿಯ ಸೇವಾ ಸಂಘ, ಮಹಿಳಾ ವೃಂದ, ಯುವ ವೃಂದ ಹಾಗೂ ಭಜನಾ ವೃಂದದ ಸಂಯುಕ್ತ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕ ಮಹಾಸಭೆಯುಜರುಗಿತು. ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಪ್ರೇಮಾನಂದ ಕೆ.ಎಸ್, ಮಂಗಳೂರು ಉತ್ತರ ವಲಯದ ಎ.ಸಿ.ಪಿ ಶ್ರೀಕಾಂತ್ ಕೆ, ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗರಾಜ ಕಾಮಧೇನು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಪಾಲ್ಗೊಂಡಿದ್ದರು. ಸಮಾಜಮುಖಿ ಕಾರ್ಯಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ನೀಡಿದ ಸೇವೆಗಾಗಿ ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ ಕೋಟೆ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಹಾಗೂ ಅರ್ಹ ಫಲಾನುಭವಿಗಳಿಗೆ ಸಹಾಯ ಹಸ್ತ ಒದಗಿಸುವ ಕಾರ್ಯಕ್ರಮಗಳು ನಡೆದವು. ಸೂರ್ಯ ರಾವ್ ವರದಿ ವಾಚಿಸಿದರು. ಸಿಂಚನ, ಸ್ಪೂರ್ತಿ ಹಾಗೂ ಸೌಜನ್ಯ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಈ ಕಾರ್ಯಕ್ರಮದಲ್ಲಿ ಸಮಿತಿಯ ವಿವಿಧ ಅಂಗಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.