ಮೂಡುಬಿದಿರೆ: ಕೆ.ಸಿ ರೋಡ್ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉಚಿತ ವೈದ್ಯಕೀಯ, ಕಣ್ಣಿನ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಏ. 26ರ ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರ ವರೆಗೆ ಕೆ.ಸಿ ರೋಡ್‌ನ ಸುಜಾತ ಜ್ಯುವೆಲ್ಲರಿ ಸಮೀಪವಿರುವ ಉಚ್ಚಿಲಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ ಮತ್ತು ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಸಂಸ್ಥೆಯ ನುರಿತ ವೈದ್ಯರು ಶಿಬಿರದಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಶಿಬಿರದಲ್ಲಿ ದಂತ ತಪಾಸಣೆ, ಹಲ್ಲುಗಳ ಶುಚೀಕರಣ, ಹುಳುಕು ಹಲ್ಲು ಭರ್ತಿ ಮಾಡುವುದು ಮತ್ತು ಬಾಧಿತ ಹಲ್ಲುಗಳನ್ನು ತೆಗೆಯುವ ಸೇವೆ ಲಭ್ಯವಿರಲಿದೆ. ಇದರೊಂದಿಗೆ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಸಮಾಲೋಚನೆ, ಬಿ.ಪಿ, ಮಧುಮೇಹ ಹಾಗೂ ಕಿವಿ, ಮೂಗು, ಗಂಟಲು ತಪಾಸಣೆ ನಡೆಯಲಿದ್ದು, ಅಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವವರಿಗೆ ಹಸಿರು ಕಾರ್ಡ್ ಸೌಲಭ್ಯವನ್ನೂ ನೀಡಲಾಗುತ್ತದೆ. ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಕೆ.ಸಿ ರೋಡ್ ಕೃಷ್ಣ ನಗರದ ಶ್ರೀ ಕೃಷ್ಣ ಭಜನಾ ಮಂದಿರ ಮತ್ತು ಪನೀರ್ ಬಾಳಿಕೆಯ ಶ್ರೀ ಲಕ್ಷ್ಮಿ ಶಾಮಿಯಾನ ಸಂಸ್ಥೆಗಳ ಸಹಕಾರದೊಂದಿಗೆ ಈ ಶಿಬಿರ ಆಯೋಜನೆಯಾಗಿದೆ. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ತಿಳಿಸಿದ್ದಾರೆ.