ಮೂಡುಬಿದಿರೆ: ಮಾವಿನ ಕಾಯಿಗಳನ್ನು ಕೀಳಲು ಮರವೇರಿದ್ದ ವೃದ್ಧರೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆಯು ಮಾಸ್ತಿಕಟ್ಟೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮಾಸ್ತಿಕಟ್ಟೆಯ ನಿವಾಸಿ ಶಿವರಾಮ್ ಶೆಟ್ಟಿ (85) ಮೃತಪಟ್ಟವರು. ಮಾವಿನ ಕಾಯಿ ವ್ಯಾಪಾರ ಮಾಡುತ್ತಿದ್ದ ಶಿವರಾಮ್ ಶೆಟ್ಟಿ, ತಮ್ಮ ಮನೆಯ ಸಮೀಪದ ಮರದಿಂದ ಕಾಯಿಗಳನ್ನು ಕೀಳಲು ಮರವೇರಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಸಂಜೆ ವೇಳೆಗೆ ಮರದ ಕೆಳಗೆ ಬಿದ್ದಿದ್ದ ಅವರ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ವಿಷಯ ತಿಳಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಮಾವಿನ ಕಾಯಿಗಳನ್ನು ಸಂಗ್ರಹಿಸಿ ಕೆಳಕ್ಕೆ ಇಳಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ಏಣಿಗಳನ್ನು ಜೋಡಿಸಿ ಮರಕ್ಕೆ ಹತ್ತಿದ್ದ ಶಿವರಾಮ್ ಶೆಟ್ಟಿ, ಹಿಂದೆ ಟೂರಿಸ್ಟ್ ವಾಹನ ಹಾಗೂ ಆಟೋ ಚಾಲಕರಾಗಿ ದುಡಿದು ಜೀವನ ನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಾವಿನ ಕಾಯಿ ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದರು. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಸ್ತಿಕಟ್ಟೆ: ಮಾವಿನ ಮರದಿಂದ ಬಿದ್ದು ಮಾವಿನ ಕಾಯಿ ಮಾರಾಟಗಾರ ದುರ್ಮರಣ
ಮಾಸ್ತಿಕಟ್ಟೆ: ಮಾವಿನ ಮರದಿಂದ ಬಿದ್ದು ಮಾವಿನ ಕಾಯಿ ಮಾರಾಟಗಾರ ದುರ್ಮರಣ