ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಪೂರ್ಣಾಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಪೂಜಾರಿ ಅವರನ್ನು ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸಮಾಜಮಂದಿರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕಿ ದಿಶಾ ಪೂಜಾರಿ ಅವರಿಗೆ 10,000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಘಟಕದ ಗೌರವ ಸಲಹೆಗಾರ ಪದ್ಮನಾಭ ಸಾಲ್ಯಾನ್ ಮಾತನಾಡಿ, ಬಿಲ್ಲವ ಸಮಾಜ ಬಾಂಧವರು ದಿಶಾ ಅವರ ವಿದ್ಯಾಭ್ಯಾಸಕ್ಕೆ ಸಣ್ಣಪುಟ್ಟ ಸಹಕಾರ ನೀಡಿದ್ದರು. ಆ ಸಹಕಾರಕ್ಕೆ ಪ್ರತಿಯಾಗಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಸಾಧನೆಯು ಬಿಲ್ಲವ ಸಮಾಜಕ್ಕೆ ಮಾತ್ರವಲ್ಲದೆ ಇಡೀ ಊರಿಗೆ ಹೆಮ್ಮೆ ತಂದಿದೆ ಎಂದರು. ಸನ್ಮಾನ ಸ್ವೀಕರಿಸಿದ ದಿಶಾ ಮಾತನಾಡಿ, ತನ್ನ ವಿದ್ಯಾಭ್ಯಾಸಕ್ಕೆ ನಿರಂತರ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿರುವ ಹಿರಿಯರಾದ ಪದ್ಮನಾಭ ಸಾಲಿಯಾನ್ ಅವರಿಗೆ ಚಿರಋಣಿಯಾಗಿದ್ದೇನೆ ಎಂದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರೀಯ ಸಮಿತಿಯ ಮಾಜಿ ಪದಾಧಿಕಾರಿ ಜಗದೀಶ್ಚಂದ್ರ ಡಿ.ಕೆ. ಅವರು ದಿಶಾ ಅವರ ಸಾಧನೆಯನ್ನು ಶ್ಲಾಘಿಸಿದರು. ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ, ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಯುವವಾಹಿನಿ ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷರಾದ ನವಾನಂದ, ಸುಶಾಂತ್ ಕರ್ಕೇರ, ಶಂಕರ ಎ. ಕೋಟ್ಯಾನ್, ಉಪಾಧ್ಯಕ್ಷೆ ಜೀವಿತಾ ಶಂಕರ್, ಕಾರ್ಯದರ್ಶಿ ಅಶ್ವಿನ್ ಬಿರ್ವ, ಕೋಶಾಧಿಕಾರಿ ಜಯಶೀಲಾ ಎಸ್. ಪೂಜಾರಿ ಹಾಗೂ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಗಿರೀಶ್ ಕೋಟ್ಯಾನ್ ಸ್ವಾಗತಿಸಿದರು. ಶಂಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪಿಯುಸಿ ಟಾಪರ್ ದಿಶಾಗೆ ಯುವವಾಹಿನಿ ಮೂಡುಬಿದಿರೆ ಘಟಕದಿಂದ ಸನ್ಮಾನ
ಪಿಯುಸಿ ಟಾಪರ್ ದಿಶಾಗೆ ಯುವವಾಹಿನಿ ಮೂಡುಬಿದಿರೆ ಘಟಕದಿಂದ ಸನ್ಮಾನ