ಮೂಡುಬಿದಿರೆ: ರೋಟರಿ ವಿದ್ಯಾಸಂಸ್ಥೆಗಳು ಮತ್ತು ಶ್ರೀ ಶಾರದಾ ನಾಟ್ಯಾಲಯದ ಸಹಯೋಗದಲ್ಲಿ ರೋಟರಿ ಶಾಲೆಯ ಸಭಾಭವನದಲ್ಲಿ ‘ಚಿಗುರು ಹಬ್ಬ - ಮಕ್ಕಳ ಬೇಸಿಗೆ ಶಿಬಿರ 2026’ಕ್ಕೆ ಚಾಲನೆ ದೊರೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ನಾರಾಯಣ್ ಪಿ.ಎಂ. ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ್ ರೆಂಜಾಳ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಇಂತಹ ಶಿಬಿರಗಳು ಪೂರಕವಾಗಿವೆ ಎಂದು ತಿಳಿಸಿದರು. ಮಕ್ಕಳನ್ನು ಕೇವಲ ಅಂಕಗಳಿಕೆಯ ಯಂತ್ರಗಳನ್ನಾಗಿ ನೋಡದೆ, ಅವರಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ರೋಟರಿ ಆಂಗ್ಲ ಮಾಧ್ಯಮದ ಸಂಚಾಲಕ ಪ್ರವೀಣ್‌ಚಂದ್ರ ಜೈನ್, ಭಾಗವತ ರವಿಚಂದ್ರ ಕನ್ನಡಿಕಟ್ಟೆ, ತಾಂತ್ರಿಕ ಸಲಹೆಗಾರ ಶಿವಪ್ರಸಾದ್ ಹೆಗ್ಡೆ, ಶ್ರೀ ಶಾರದಾ ನಾಟ್ಯಾಲಯದ ಅಧ್ಯಕ್ಷ ಶಂಕರ್ ಕುಲಾಲ್ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ್ ಜೈನ್ ಉಪಸ್ಥಿತರಿದ್ದರು. ತಿಲಕಾ ಅನಂತವೀರ್ ಜೈನ್ ಅತಿಥಿಗಳನ್ನು ಸ್ವಾಗತಿಸಿದರು. ಶಿಬಿರದ ಯಶಸ್ಸಿಗೆ ಶ್ರಮಿಸುತ್ತಿರುವ ಎಲ್ಲರಿಗೂ ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕ ಮೋಹನ್ ಹೊಸ್ಮಾರ್ ವಂದಿಸಿದರು. ಮಾನಸ ಪ್ರವೀಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.