ಮೂಡುಬಿದಿರೆ: ತಾಲೂಕಿನಾದ್ಯಂತ ಸಂಭವಿಸಿದ ವಿಪರೀತ ಗಾಳಿ ಮಳೆಗೆ ಉಡುಪಿ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಚರ್ಚ್ ಬಳಿ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೆಲ್ಲಿಕಾರು ಪರಿಸರದಲ್ಲಿ ಭಾರಿ ಗಾಳಿಗೆ 10ಕ್ಕೂ ಅಧಿಕ ಮರಗಳು ಧರೆಗುರುಳಿವೆ.

ಮರಗಳು ಬಿದ್ದ ರಭಸಕ್ಕೆ ಸುಮಾರು 20 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯ ತೀವ್ರತೆಗೆ ನೆಲ್ಲಿಕಾರು ಗ್ರಾಮದ ಪದ್ಮಪ್ರಸಾದ್ ಅವರ ಮನೆಯ ಮೇಲ್ಛಾವಣಿಯ 12ಕ್ಕೂ ಹೆಚ್ಚು ಶೀಟ್‌ಗಳು ಹಾರಿಹೋಗಿ ಮನೆಗೆ ಹಾನಿಯಾಗಿದೆ. ತೋಟದ ಕೃಷಿಗೂ ಭಾರಿ ನಷ್ಟ ಸಂಭವಿಸಿದೆ. ಸ್ಥಳೀಯರು ಮತ್ತು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ.