ಮೂಡುಬಿದಿರೆ: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮೂಡುಬಿದಿರೆ, ಬಪ್ಪನಾಡು, ಪೊಳಲಿ, ಕಟೀಲು ಸೇರಿದಂತೆ ವಿವಿಧ ಬಸದಿ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಮಲ್ಲಿಗೆ ಸೇವೆ ಸಲ್ಲಿಸಿ ಅವರ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಶನಿವಾರ ಮೂಡುಬಿದಿರೆಯ ಶ್ರೀ ಹನುಮಂತ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ಹಾಗೂ ಶರವು ದೇವಳದಲ್ಲಿ ಮಲ್ಲಿಗೆ ಸೇವೆ ನೆರವೇರಿಸಿದ ಅವರು, ಡಿ.ಕೆ. ಶಿವಕುಮಾರ್ ಅವರು ದೈವಭಕ್ತ ಹಾಗೂ ಸಮರ್ಥ ನಾಯಕರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖ ದೇಗುಲಗಳಿಗೆ ಅವರನ್ನು ಕರೆತರುವ ಇಚ್ಛೆಯನ್ನೂ ಅಭಯಚಂದ್ರ ಜೈನ್ ತಿಳಿಸಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಹಾಗೂ ಮೂಡುಬಿದಿರೆ ತಾಲೂಕು ಘೋಷಣೆ ಸೇರಿದಂತೆ ಅಭಿವೃದ್ಧಿಗೆ ನೀಡಿದ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.