ಮೂಡುಬಿದಿರೆ: ಬೆಳುವಾಯಿ ಗ್ರಾಮದ ಶ್ರೀ ಕುಕ್ಕಿನಂತ್ತಾಯ, ಕೊಡಮಣಿತ್ತಾಯ, ವ್ಯಾಘ್ರಚಾಮುಂಡಿ-ಪಂಜುರ್ಲಿ ಹಾಗೂ ಬ್ರಹ್ಮಬೈದರ್ಕಳ ದೈವಸ್ಥಾನದ ಕಲ್ಲೋಳಿ ಪಾದೆ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ರಾತ್ರಿ ಅಪರೂಪದ ಗುಡ್ಜಿ ನೇಮ ನಡೆಯಿತು. ಗ್ರಾಮಸ್ಥರ ಸಹಭಾಗಿತ್ವದಲ್ಲಿ 45 ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಧಾರ್ಮಿಕ ಕಾರ್ಯಕ್ರಮ ಸಂಘಟಿತವಾಗಿತ್ತು. ಬಾಕಿಮಾರು ಗದ್ದೆಯಲ್ಲಿ ನಿರ್ಮಿಸಲಾದ ವಿಶಾಲ ಚಪ್ಪರ ಹಾಗೂ ನಾಲ್ಕು ಕಂಬಗಳ ಒಂಬತ್ತು ಅಂತಸ್ತುಗಳ ಗುಡ್ಜಿ ಎಲ್ಲರ ಗಮನ ಸೆಳೆಯಿತು. ನೇಮೋತ್ಸವಕ್ಕಾಗಿ ದೈವಗಳ ಹೊಸ ಮಂಚ ಸೇರಿದಂತೆ ಎಲ್ಲ ಹೊಸ ಪರಿಕರಗಳನ್ನು ಬಳಸಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಬೆಳಿಗ್ಗೆ ದೈವಗಳ ಭಂಡಾರ ಆಗಮನವಾದ ನಂತರ ಗಣಪತಿ ಹೋಮ ನೆರವೇರಿತು. ರಾತ್ರಿ ರಾಜನ್‌ದೈವಗಳಾದ ಕುಕ್ಕಿನಂತಾಯಿ, ಕೊಡಮಣಿತ್ತಾಯ ಹಾಗೂ ಬ್ರಹ್ಮಬೈದರ್ಕಳ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ನೇಮ ಕಾರ್ಯಗಳು ನಡೆದವು. ಗುತ್ತಿನಾರ್ ನರೇಶ್ ಶೆಟ್ಟಿ ಬರಕಳಗುತ್ತು ನೇತೃತ್ವದಲ್ಲಿ ಜರಗಿತು.