ಮೂಡುಬಿದಿರೆ: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ (YIT) ತನ್ನ 18ನೇ ವಾರ್ಷಿಕೋತ್ಸವ‌ ಸಮಾರಂಭವನ್ನು‌ ಶುಕ್ರವಾರ ಆಯೋಜಿಸಲಾಯಿತು.

ಮಂಗಳೂರಿನ ಅಕೋಲೇಡ್ ಟೆಕ್ ಸೊಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಹರೀಶ್ ನೀರ್ಮಾರ್ಗ ಕಾರ್ಯಕ್ರಮ ಉದ್ಘಾಟಿಸಿದರು. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ವೈ.ಐ.ಟಿ ಸಂಸ್ಥೆಯು ನಾವೀನ್ಯತೆ ಮತ್ತು ಮಾನವೀಯ ಮೌಲ್ಯಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ಜಾಗತಿಕ ಸವಾಲುಗಳಿಗೆ ಸಿದ್ಧಪಡಿಸುತ್ತಿದೆ ಎಂದು ಸಂಸ್ಥೆಯ ಶೈಕ್ಷಣಿಕ ಬದ್ಧತೆಯನ್ನು ಶ್ಲಾಘಿಸಿದರು

ಮೂಡುಬಿದಿರೆ ವೈಬ್ರೆಂಟ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ, ವೈಬ್ರೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ಎನ್. ವೆಂಕಟೇಶ್ ನಾಯಕ್ ಅತಿಥಿಯಾಗಿ ಮಾತನಾಡಿ, ವೈ.ಐ.ಟಿ ತನ್ನ ವಿದ್ಯಾರ್ಥಿ ಕೇಂದ್ರಿತ ವಿಧಾನದಿಂದಾಗಿ ಕರ್ನಾಟಕದ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣದ ದಾರಿದೀಪವಾಗಿ ಹೊರಹೊಮ್ಮಿದೆ ಎಂದರು. ಎನೆಪೋಯ ಸಮೂಹ ಸಂಸ್ಥೆಗಳ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಎನೆಪೋಯ ಅಬ್ದುಲ್ಲಾ ಜಾವೇದ್ ಅತಿಥಿಯಾಗಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಅಬ್ದುಲ್ ಕರೀಂ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿ, ಉದ್ಯೋಗ ಅವಕಾಶಗಳು, ಸಂಶೋಧನೆ, ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ ಹಾಗೂ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು.

ಕ್ಯಾಂಪಸ್ ಅಡ್ಮಿನಿಸ್ಟ್ರೇಟರ್ ಬಿ. ಮೊಹಮ್ಮದ್ ಶಾಹಿದ್, ವಿವಿಧ ವಿಭಾಗಗಳ ಡೀನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ರಾಜ್ಯ ಮಟ್ಟದ ಹಾಗೂ ದಕ್ಷಿಣ-ಪಶ್ಚಿಮ ವಲಯದ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ನಿತ್ಯ ಎಸ್.ಪಿ. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಹಾಯಕ ಪ್ರಾಧ್ಯಾಪಕಿ ಲಮಿ ಎಂ. ಸಿ. ವಂದಿಸಿದರು.